ಬಿಪಿಎಲ್ (BPL) ರೇಷನ್ ಕಾರ್ಡ್ ಹೊಂದಿರುವ ಹಾಗೂ ಹೊಸ ಕಾರ್ಡ್ಗಾಗಿ ಕಾಯುತ್ತಿರುವ ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಭರ್ಜರಿ ಸಿಹಿಸುದ್ದಿ ನೀಡುವ ಸಾಧ್ಯತೆ ದಟ್ಟವಾಗಿದೆ. ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಯ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು ಬಿಪಿಎಲ್ ಕಾರ್ಡ್ ಆದಾಯ ಮಿತಿ (Income Limit) ಹೆಚ್ಚಳ ಮಾಡುವ ಕುರಿತು ಅತ್ಯಂತ ಮಹತ್ವದ ಸುಳಿವು ನೀಡಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರು ಎತ್ತಿದ ಪ್ರಮುಖ ಪ್ರಶ್ನೆಗಳಿಗೆ ಆಹಾರ ಸಚಿವರ ಪರವಾಗಿ ಉತ್ತರಿಸಿದ ದಿನೇಶ್ ಗುಂಡೂರಾವ್, ಬಿಪಿಎಲ್ ಕಾರ್ಡ್ ವ್ಯವಸ್ಥೆಯಲ್ಲಿರುವ ನ್ಯೂನತೆಗಳು ಹಾಗೂ ಸರ್ಕಾರದ ಮುಂದಿನ ಹೆಜ್ಜೆಗಳ ಬಗ್ಗೆ ಸಂಪೂರ್ಣ ಮತ್ತು ಅಧಿಕೃತ ಮಾಹಿತಿ ಬಿಚ್ಚಿಟ್ಟರು. ಸದನದಲ್ಲಿ ನಡೆದ ಚರ್ಚೆಯ ಪ್ರಮುಖ ಅಂಶಗಳು ಇಲ್ಲಿವೆ:
BPL Card Income Limit in Karnataka:
ಬಿಪಿಎಲ್ ಆದಾಯ ಮಿತಿ 3 ಲಕ್ಷಕ್ಕೆ ಏರಿಕೆ?: ಪ್ರಸ್ತುತ ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು ₹1,20,000 ಕ್ಕೆ ನಿಗದಿಪಡಿಸಲಾಗಿದೆ; ಈ ನಿಯಮವನ್ನು 2017 ರಲ್ಲೇ ಜಾರಿಗೆ ತರಲಾಗಿತ್ತು. ಒಂಬತ್ತು ವರ್ಷಗಳ ನಂತರವೂ ಇದೇ ಮಿತಿ ಇರುವುದು ಬಹಳ ಕಮ್ಮಿ ಎಂಬುದನ್ನು ಸರ್ಕಾರ ಖುದ್ದಾಗಿ ಒಪ್ಪಿಕೊಂಡಿದೆ.
ಆರ್.ವಿ. ದೇಶಪಾಂಡೆ ನೇತೃತ್ವದ ‘ಆಡಳಿತ ಸುಧಾರಣಾ ಆಯೋಗ’ವು ಈ ಆದಾಯ ಮಿತಿಯನ್ನು ₹2.5 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಈ ಬಗ್ಗೆ ಆಹಾರ ಇಲಾಖೆಯು ಗಂಭೀರವಾಗಿ ಪರಿಶೀಲನೆ ನಡೆಸಲಿದ್ದು, ಮಿತಿಯನ್ನು ಎಷ್ಟು ಹೆಚ್ಚಿಸಬೇಕು ಎಂಬ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಭರವಸೆ ಸಿಕ್ಕಿದೆ.
ಟ್ಯಾಕ್ಸಿ, ಆಟೋ ಚಾಲಕರ ಕಾರ್ಡ್ಗಳು ರಿಜೆಕ್ಟ್! ಬೆಂಗಳೂರಿನಂತಹ ನಗರಗಳಿಗೆ ವಲಸೆ ಬಂದು ಟ್ಯಾಕ್ಸಿ ಹಾಗೂ ಆಟೋ ಓಡಿಸುವ ಚಾಲಕರು ತಿಂಗಳಿಗೆ 15-20 ಸಾವಿರ ರೂ. ದುಡಿಯುತ್ತಾರೆ. ಆದರೆ ಅವರ ಬ್ಯಾಂಕ್ ಖಾತೆಯಲ್ಲಿ ₹1.20 ಲಕ್ಷಕ್ಕಿಂತ ಹೆಚ್ಚು ವಹಿವಾಟು (Transaction) ನಡೆದರೆ, ಬಿಪಿಎಲ್ ಕಾರ್ಡ್ಗಳನ್ನು ರಿಜೆಕ್ಟ್ ಮಾಡಲಾಗುತ್ತಿದೆ ಎಂಬ ಗಂಭೀರ ಸಮಸ್ಯೆಯನ್ನು ಶಾಸಕರು ಸದನದ ಮುಂದಿಟ್ಟರು.
ಈ ವೇಳೆ, ಆದಾಯ ಮಿತಿಯನ್ನು ಲೆಕ್ಕಾಚಾರ ಮಾಡುವಾಗ ವೃತ್ತಿಯನ್ನು (Profession) ಆಧಾರವಾಗಿಟ್ಟುಕೊಳ್ಳುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಲಿದೆ ಎಂಬ ವಿಚಾರ ಚರ್ಚೆಗೆ ಬಂತು.
ರೇಷನ್ಗಿಂತ ಮೆಡಿಕಲ್ಗೇ ಬಿಪಿಎಲ್ ಕಾರ್ಡ್ ಡಿಮ್ಯಾಂಡ್! ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು “ಆದ್ಯತಾ ಕುಟುಂಬಗಳು” (PHH) ಎಂದು ಗುರುತಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರಿಗೆ ರೇಷನ್ ಅಗತ್ಯವಿಲ್ಲದಿದ್ದರೂ ಕೇವಲ ಉಚಿತ ವೈದ್ಯಕೀಯ ಚಿಕಿತ್ಸೆಗಳ ಲಾಭ ಪಡೆಯಲು (Medical purposes) ಬಿಪಿಎಲ್ ಕಾರ್ಡ್ಗೆ ಮುಗಿಬೀಳುತ್ತಿದ್ದಾರೆ; ಇದರಿಂದ ಅನರ್ಹರೂ ಕಾರ್ಡ್ ಪಡೆಯುತ್ತಿದ್ದು ದುರುಪಯೋಗವಾಗುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಕೇಂದ್ರದ ಕೋಟಾಗಿಂತ ರಾಜ್ಯದಿಂದಲೇ ಹೆಚ್ಚು ಕಾರ್ಡ್ ವಿತರಣೆ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (NFSA) ಕೇಂದ್ರ ಸರ್ಕಾರವು ರಾಜ್ಯದ 1 ಕೋಟಿ 9 ಲಕ್ಷ ಕುಟುಂಬಗಳಿಗೆ ಮಾತ್ರ ರೇಷನ್ ವಿತರಿಸಲು ತೀರ್ಮಾನಿಸಿದೆ. ಆದರೆ, ರಾಜ್ಯ ಸರ್ಕಾರವು ಅದಕ್ಕಿಂತ 15 ಲಕ್ಷ 80 ಸಾವಿರಕ್ಕೂ ಹೆಚ್ಚು ಅಂದರೆ, ಬರೋಬ್ಬರಿ 1 ಕೋಟಿ 24 ಲಕ್ಷ ಕುಟುಂಬಗಳಿಗೆ ಸ್ವಂತ ಖರ್ಚಿನಲ್ಲಿ ಪಡಿತರ ಒದಗಿಸುತ್ತಿದೆ.
ಆರೋಗ್ಯ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದ ಸಚಿವರು, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಶೇ.25 ರಷ್ಟು ಮಾತ್ರ ಕೇಂದ್ರ ಸರ್ಕಾರದ ಅನುದಾನವಿದ್ದು, ಉಳಿದ ಶೇ.75 ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.
ಅನಿಸಿಕೆ: 2017 ರಲ್ಲಿದ್ದ ಬೆಲೆ ಏರಿಕೆಗೂ ಇಂದಿನ ಹಣದುಬ್ಬರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ₹1.20 ಲಕ್ಷ ಆದಾಯ ಮಿತಿ ಇಂದಿನ ದಿನಮಾನಕ್ಕೆ ಅತ್ಯಂತ ಅವೈಜ್ಞಾನಿಕವಾಗಿದೆ. ಆಡಳಿತ ಸುಧಾರಣಾ ಆಯೋಗದ ವರದಿಯಂತೆ ಸರ್ಕಾರವು ಆದಾಯ ಮಿತಿಯನ್ನು ಕನಿಷ್ಠ ₹3 ಲಕ್ಷಕ್ಕೆ ಏರಿಸಿದರೆ, ರಾಜ್ಯದ ಲಕ್ಷಾಂತರ ನೈಜ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ರೇಷನ್ ಜೊತೆಗೆ, ಆರೋಗ್ಯ ಸಂಜೀವಿನಿಯಂತಹ ಬೃಹತ್ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ.