ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ (PM-Kisan) ಯೋಜನೆಯ 22ನೇ ಕಂತಿನ ಹಣ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಇದೇ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬರೋಬ್ಬರಿ 9.32 ಕೋಟಿ ರೈತರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಬಟನ್ ಒತ್ತುವ ಮೂಲಕ ರೈತರ ಖಾತೆಗೆ 22ನೇ ಕಂತಿನ ಹಣವನ್ನು ರವಾನಿಸಲಿದ್ದಾರೆ. ಆದರೆ, ಈ ಹಣ ನಿಮ್ಮ ಖಾತೆಗೆ ಯಾವುದೇ ಅಡೆತಡೆಯಿಲ್ಲದೆ ಜಮೆಯಾಗಬೇಕೆಂದರೆ ರೈತರು ಮಾಡಬೇಕಾದ ಪ್ರಮುಖ ಕೆಲಸವೊಂದಿದೆ.
ಆದಷ್ಟು ಬೇಗ ಇ-ಕೆವೈಸಿ (PM Kisan e-KYC) ಪೂರ್ಣಗೊಳಿಸಿ: ಪಿಎಂ ಕಿಸಾನ್ ಪೋರ್ಟಲ್ನಲ್ಲಿ ರೈತರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಹಾಗೂ ಯಾರದ್ದಾದರೂ ಇ-ಕೆವೈಸಿ (e-KYC) ಪ್ರಕ್ರಿಯೆ ಬಾಕಿ ಇದ್ದರೆ, ಅದನ್ನು ಆದಷ್ಟು ಬೇಗ ಮುಗಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಬುಧವಾರ ಸೂಚನೆ ನೀಡಿದೆ.
“ಯೋಜನೆಯ ಹಣ ಸರಿಯಾದ ಸಮಯಕ್ಕೆ ರೈತರ ಖಾತೆಗೆ ಸೇರಬೇಕೆಂದರೆ, ಅಗತ್ಯವಿರುವವರು ತಮ್ಮ ಇ-ಕೆವೈಸಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳಿ” ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?: ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ಎಂಬ ಗೊಂದಲವಿದ್ದರೆ, ಅದನ್ನು ಪೋರ್ಟಲ್ನಲ್ಲಿರುವ ‘ನಿಮ್ಮ ಸ್ಥಿತಿ ತಿಳಿಯಿರಿ’ (Know Your Status – KYS) ಆಯ್ಕೆಯ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಇಲ್ಲಿ ನಿಮ್ಮ ಪಾವತಿಯ ಸ್ಥಿತಿ, ಯೋಜನೆಗೆ ನಿಮ್ಮ ಅರ್ಹತೆ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಹಾಗೂ ಇ-ಕೆವೈಸಿ ಅಪ್ಡೇಟ್ ಆಗಿದೆಯೇ ಎಂಬ ಸಂಪೂರ್ಣ ವಿವರ ಲಭ್ಯವಿರುತ್ತದೆ.
ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಿ: ರೈತರು ಕಚೇರಿಗಳಿಗೆ ಅಥವಾ ಸೈಬರ್ ಸೆಂಟರ್ಗಳಿಗೆ ಅಲೆಯುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಹೊಸ ಮೊಬೈಲ್ ಆಪ್ (App) ಒಂದನ್ನೂ ಬಿಡುಗಡೆ ಮಾಡಿದೆ. ಸ್ಮಾರ್ಟ್ಫೋನ್ ಹೊಂದಿರುವ ರೈತರು ಈ ಆಪ್ ಮೂಲಕ ತಮ್ಮ ಮನೆಯಿಂದಲೇ ಅತ್ಯಂತ ಸುಲಭವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಶುಕ್ರವಾರವೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ ಬಿಡುಗಡೆಯಾಗುತ್ತಿರುವುದರಿಂದ, ಇ-ಕೆವೈಸಿ ಬಾಕಿ ಉಳಿಸಿಕೊಂಡಿರುವ ರೈತರು ಕೊನೆಗಳಿಗೆಯವರೆಗೆ ಕಾಯದೆ ತಕ್ಷಣವೇ ಪ್ರಕ್ರಿಯೆ ಮುಗಿಸಿಕೊಳ್ಳುವುದು ಒಳಿತು.