ಎಲ್‌ಪಿಜಿ ಬಿಕ್ಕಟ್ಟು: ಒಂದು ಕುಟುಂಬಕ್ಕೆ ಒಂದೇ ಸಿಲಿಂಡರ್; ಸರ್ಕಾರದ ಮಹತ್ವದ ಘೋಷಣೆ

Telegram Group Join Now
WhatsApp Group Join Now

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಇದೀಗ ಕರುನಾಡಿನ ಅಡುಗೆ ಮನೆಗಳಿಗೂ ನೇರವಾಗಿ ತಟ್ಟಲಾರಂಭಿಸಿದೆ. ರಾಜ್ಯದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗದಂತೆ ತಡೆಯಲು ರಾಜ್ಯ ಸರ್ಕಾರ ಮಹತ್ವದ ಹಾಗೂ ಕಠಿಣ ನಿರ್ಧಾರವೊಂದನ್ನು ಪ್ರಕಟಿಸಿದೆ.

ಇನ್ಮುಂದೆ ಒಂದು ಕುಟುಂಬಕ್ಕೆ ತಿಂಗಳಿಗೆ ಕೇವಲ ಒಂದು ಗೃಹಬಳಕೆಯ ಸಿಲಿಂಡರ್ ಅನ್ನು ಮಾತ್ರ ನೀಡಲು ತೀರ್ಮಾನಿಸಲಾಗಿದ್ದು, ಅಕ್ರಮವಾಗಿ ಗ್ಯಾಸ್ ದಾಸ್ತಾನು ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ತೀವ್ರ ವಾಕ್ಸಮರ: ಗುರುವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕುಣಿಗಲ್ ಶಾಸಕ ರಂಗನಾಥ್ ಅವರು ವಾಣಿಜ್ಯ ಸಿಲಿಂಡರ್ ಕೊರತೆ ಹಾಗೂ ಬೆಲೆ ಏರಿಕೆ (900 ರೂ. ನಿಂದ 1,800 ರೂ.ಗೆ ಏರಿಕೆ) ಕುರಿತು ಪ್ರಸ್ತಾಪಿಸಿದರು.

“ಈ ಸಿಲಿಂಡರ್ ಅಭಾವಕ್ಕೆ ಕೇಂದ್ರ ಸರ್ಕಾರದ ದುರ್ಬಲ ವಿದೇಶಾಂಗ ನೀತಿಯೇ ನೇರ ಕಾರಣ” ಎಂದು ಪ್ರಧಾನಿ ಮೋದಿ ಹೆಸರು ಉಲ್ಲೇಖಿಸುತ್ತಿದ್ದಂತೆ, ಕೆರಳಿದ ಬಿಜೆಪಿ ಸದಸ್ಯರು ಶಾಸಕ ರಂಗನಾಥ್ ವಿರುದ್ಧ ಮುಗಿಬಿದ್ದರು. ಇದರಿಂದ ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ಕೋಲಾಹಲ ಸೃಷ್ಟಿಯಾಯಿತು.

ಸಚಿವ ಮುನಿಯಪ್ಪ ಕೊಟ್ಟ ಸ್ಪಷ್ಟನೆ ಏನು? ಗದ್ದಲದ ನಡುವೆ ಎದ್ದುನಿಂತು ಉತ್ತರಿಸಿದ ಸಚಿವ ಕೆ.ಎಚ್. ಮುನಿಯಪ್ಪ, ತೈಲ ಕಂಪನಿಗಳ ಜೊತೆ ನಡೆಸಿದ ಸಭೆಯ ಮಾಹಿತಿ ಬಿಚ್ಚಿಟ್ಟರು. “ಇರಾನ್-ಇಸ್ರೇಲ್ ಯುದ್ಧ ನಡೆಯುತ್ತಿರುವುದರಿಂದ ಕಚ್ಚಾ ತೈಲ ಹೊತ್ತ ಹಡಗುಗಳನ್ನು ಸಮುದ್ರ ಮಾರ್ಗದಲ್ಲಿ ಬಿಡುತ್ತಿಲ್ಲ. ನಮ್ಮಲ್ಲಿ ಕೇವಲ ಶೇ. 20-30 ರಷ್ಟು ಮಾತ್ರ ಸ್ವಂತ ಇಂಧನ ಉತ್ಪಾದನೆ ಇದ್ದು, ಉಳಿದ ಶೇ. 70 ರಷ್ಟು ಗ್ಯಾಸ್ ವಿದೇಶದಿಂದಲೇ ಬರಬೇಕಿದೆ. ಹೀಗಾಗಿ ಪರಿಸ್ಥಿತಿ ಗಂಭೀರವಾಗಿದೆ” ಎಂದು ವಾಸ್ತವವನ್ನು ವಿವರಿಸಿದರು.

ತಿಂಗಳಿಗೆ ಒಂದೇ ಸಿಲಿಂಡರ್, ದಾಸ್ತಾನು ಮಾಡಿದರೆ ಜೈಲು! ರಾಜ್ಯದ ಜನತೆಗೆ ಅಭಯ ನೀಡಿದ ಸಚಿವರು, “ಸದ್ಯಕ್ಕೆ ಗೃಹಬಳಕೆಯ ಸಿಲಿಂಡರ್‌ಗಳಿಗೆ ಯಾವುದೇ ಕೊರತೆಯಿಲ್ಲ; ಇವತ್ತಿನವರೆಗೂ ಸರಬರಾಜು ಸುಗಮವಾಗಿದೆ. ಹಾಗಂತ ಗ್ಯಾಸ್ ಪೋಲು ಮಾಡುವಂತಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಕುಟುಂಬಕ್ಕೆ 28 ದಿನಗಳ ಬಳಕೆಗೆ (ಒಂದು ತಿಂಗಳಿಗೆ) ಕೇವಲ ಒಂದೇ ಸಿಲಿಂಡರ್ ನೀಡಲು ನಿರ್ಧರಿಸಲಾಗಿದೆ.

14.2 ಕೆಜಿ ತೂಕದ ಸಿಲಿಂಡರ್ ನಾಲ್ಕು ಜನರ ಕುಟುಂಬಕ್ಕೆ ಒಂದು ತಿಂಗಳಿಗೆ ಧಾರಾಳವಾಗಿ ಸಾಕಾಗುತ್ತದೆ” ಎಂದರು. ಮುಂದುವರಿದು, “ಯಾವುದೇ ಕಾರಣಕ್ಕೂ ಸಿಲಿಂಡರ್ ಸ್ಟೋರೇಜ್ (ದಾಸ್ತಾನು) ಮಾಡುವಂತಿಲ್ಲ. ಯಾರು ನಿಯಮ ಮೀರಿ ದಾಸ್ತಾನು ಮಾಡುತ್ತಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಕ್ರಮ ಜರುಗಿಸುತ್ತೇವೆ” ಎಂದು ಎಚ್ಚರಿಸಿದರು.

ಹೋಟೆಲ್, ಕಲ್ಯಾಣ ಮಂಟಪಗಳಿಗೆ ಮನವಿ: ವಾಣಿಜ್ಯ (Commercial) ಸಿಲಿಂಡರ್‌ಗಳ ಕೊರತೆ ಇರುವುದು ನಿಜ ಎಂದು ಒಪ್ಪಿಕೊಂಡ ಸಚಿವರು, “ಸದ್ಯ ಲಭ್ಯವಿರುವ ವಾಣಿಜ್ಯ ಸಿಲಿಂಡರ್‌ಗಳನ್ನು ಆಸ್ಪತ್ರೆ ಮತ್ತು ಶಾಲೆಗಳಿಗೆ ಆದ್ಯತೆ ಮೇರೆಗೆ ಪೂರೈಸಬೇಕಾದ ಅನಿವಾರ್ಯತೆ ಇದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಹೋಟೆಲ್ ಹಾಗೂ ಕಲ್ಯಾಣ ಮಂಟಪದ ಮಾಲೀಕರು ಮತ್ತು ಸಾರ್ವಜನಿಕರು ಸರ್ಕಾರಕ್ಕೆ ಸಹಕರಿಸಬೇಕು. ಪರಿಸ್ಥಿತಿ ತಿಳಿಯಾಗುವವರೆಗೆ ಗ್ಯಾಸ್ ಅನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ” ಎಂದು ಮನವಿ ಮಾಡಿದರು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಸರ್ಕಾರ, ಈ ಬಗ್ಗೆ ನಿಗಾ ಇಡಲು ಮುಖ್ಯ ಕಾರ್ಯದರ್ಶಿಗಳ (CS) ನೇತೃತ್ವದಲ್ಲಿ ಪ್ರತಿ ವಾರ ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ಯುದ್ಧದ ಪರಿಣಾಮ ಜಾಗತಿಕ ಪೂರೈಕೆ ಸರಪಳಿ ಕಡಿತಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಗ್ಯಾಸ್ ಬಳಕೆಯಲ್ಲಿ ಮಿತವ್ಯಯ ಕಾಯ್ದುಕೊಳ್ಳುವುದು ಜಾಣತನ.

Telegram Group Join Now
WhatsApp Group Join Now

Leave a Comment